ಸುಬೇದಾರ್ ಸಂಜಯ್ ಕುಮಾರ್, ಪಿವಿಸಿ (ಜನನ ಮಾರ್ಚ್ ೩, ೧೯೭೬ ) ಭಾರತೀಯ ಸೇನೆಯಲ್ಲಿ ಕಿರಿಯ ಆಯೋಗದ ಅಧಿಕಾರಿ, ಮತ್ತು ಭಾರತದ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ ಪರಮ್ ವೀರ್ ಚಕ್ರವನ್ನು ಪಡೆದವರು. == ಪ್ರಾರಂಭಿಕ ದಿನಗಳು == ಕುಮಾರ್ ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯ ಕಲೋಲ್ ಬಕೈನ್ ಗ್ರಾಮದಲ್ಲಿ ಜನಿಸಿದರು. ಸೈನ್ಯಕ್ಕೆ ಸೇರುವ ಮೊದಲು ಅವರು ನವದೆಹಲಿಯಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಸೈನ್ಯಕ್ಕೆ ಆಯ್ಕೆಯಾಗುವ ಮೊದಲು ಅವರ ಅರ್ಜಿಯನ್ನು ಮೂರು ಬಾರಿ ತಿರಸ್ಕರಿಸಲಾಗಿತ್ತು. == ಸೈನಿಕ ಕಾರ್ಯಾಚರಣೆ == ಜುಲೈ ೪, ೧೯೯೯ರಂದು, ೧೩ ನೇ ಬೆಟಾಲಿಯನ್, ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ ಸದಸ್ಯರಾಗಿ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಏರಿಯಾ ಫ್ಲಾಟ್ ಟಾಪ್ ಅನ್ನು ವಶಪಡಿಸಿಕೊಳ್ಳುವ ತಂಡದ ಪ್ರಮುಖ ಸದಸ್ಯರಾಗಿದ್ದರು. ಈ ಪ್ರದೇಶವನ್ನು ಪಾಕಿಸ್ತಾನದ ಪಡೆಗಳು ವಶಪಡಿಸಿಕೊಂಡಿದ್ದವು. ಎತ್ರದಲ್ಲಿರುವ ಈ ಪ್ರದೇಶವನ್ನು ಶತ್ರುಪಡೆ ವಶ ಪಡಿಸಿಕೊಳ್ಳುವುದು ಕಷ್ಟಸಾದ್ಯವಾದ ಕಾರ್ಯವಾಗಿತ್ತು. ಇಲ್ಲಿ ತಲುಪಲು ಕಡಿದಾದ ಬಂಡೆಯನ್ನು ಏರಿ ನಂತರ, ಸುಮಾರು ೧೫೦ ಮೀಟರ್ ದೂರದಲ್ಲಿದ್ದ ಶತ್ರು ಬಂಕರ್‌ನತ್ತ ಮೆಷಿನ್ ಗನನ್ನು ಚಲಾಯಿಸಿ ಕಾರ್ಯಾಚರಣೆಯ ಸ್ಥಳವನ್ನು ತಲುಪಲಾಯ್ತು. ಏರಿಯಾ ಫ್ಲಾಟ್ ಟಾಪ್ ಅನ್ನು ವಶಪಡಿಸಿಕೊಳ್ಳುವಲ್ಲಿ ಆಗ ಬಹುದಾದ ಸಮಸ್ಯೆಯ ಪ್ರಮಾಣ ಮತ್ತು ಹಾನಿಕಾರಕ ಪರಿಣಾಮವನ್ನು ಅರಿತುಕೊಂಡ ಕುಮಾರ್, ಅಲ್ಲಿದ್ದ ಬಂಡೆಗಳ ಸಾಲಿನುದ್ದಕ್ಕೂ ಏಕಾಂಗಿಯಾಗಿ ತೆವಳುತ್ತಾ ಸ್ವಯಂಚಾಲಿತ ಬಂದೂಕಿನ ಮೂಲಕ ಸತತವಾಗಿ ಗುಂಡು ಹಾರಿಸುತ್ತಾ ಶತ್ರು ಬಂಕರ್ ಕಡೆ ಚಲಿಸಿದರು. ಶತ್ರುಗಳ ಪ್ರತಿದಾಳಿಯಿಂದ ಅವರ ಎದೆ ಮತ್ತು ಮುಂದೋಳಿಗೆ ಎರಡು ಗುಂಡುಗಳು ನುಸುಳಿ ರಕ್ತಸ್ರಾವವಾಯಿತು.ಸಂಜಯ್ ಕುಮಾರ್ ಅವರು ಬುಲೆಟ್ ಗಾಯಗಳಿಂದ ರಕ್ತ ಸುರಿಯುತ್ತಿದ್ದರೂ, ಬಂಕರ್ ಕಡೆಗೆ ಚಲಿಸಿವುದನ್ನು ನಿಲ್ಲಿಸದೇ ಮುಂದುವರಿಸಿದರು. ಬಳಿಕ ಪರಸ್ಪರ ನೇರ ಹೊಡೆದಾಟದಲ್ಲಿ ಅವರು ಮೂರು ಶತ್ರು ಸೈನಿಕರನ್ನು ಕೊಂದರು. ನಂತರ ಶತ್ರುವಿನ ಮೆಷಿನ್ ಗನ್ ಎತ್ತಿಕೊಂಡು ಎರಡನೇ ಶತ್ರು ಬಂಕರ್ ಕಡೆಗೆ ಸಾಗಿದರು. ಈ ಅನಿರೀಕ್ಷಿತ ದಾಳಿಯಿಂದ ಶತ್ರು ಸೈನಿಕರು ಆಕ್ರಮಿತ ಪ್ರದೇಶದಿಂದ ಪಲಾಯನ ಮಾಡಬೇಕಾಯಿತು. ಈ ಅವಕಾಶವನ್ನು ಬಳಸಿಕೊಂಡು ಇವರ ಪ್ಲಟೂನ್‍ನ ಇತರ ಸೈನಿಕರೂ ಜೊತೆ ಸೇರಿ ಶತ್ರು ಸೈನಿಕರ ಮೇಲೆ ಆಕ್ರಮಣ ಮಾಡಿದರು. ಈ ಬಗೆಯಲ್ಲಿ . ಏರಿಯಾ ಫ್ಲಾಟ್ ಟಾಪ್ ಅನ್ನು ಸಂಜಯ್ ಕುಮಾರ್ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಯ್ತು. == ವಿವಾದ == ೨೦೧೦ರಲ್ಲಿ ಕುಮಾರ್ ಅವರನ್ನು ಹವಿಲ್ದಾರ್ ಹುದ್ದೆಯಿಂದ ಲ್ಯಾನ್ಸ್ ನಾಯಕ್ ಗೆ ಇಳಿಸಲಾಯಿತು. ಈ ಪ್ರಕ್ರಿಯೆಗೆ ಯಾವುದೇ ಕಾರಣಗಳನ್ನು ನೀಡಲು ಸೈನ್ಯ ನಿರಾಕರಿಸಿತು. ಇದಲ್ಲದೇ, ಪತ್ರಿಕಾ ಪ್ರಕಟಣೆಗಳಲ್ಲಿ ಅವರನ್ನು ಹವಿಲ್ದಾರ್ ಎಂದು ಉಲ್ಲೇಖಿಸುವುದನ್ನು ಮುಂದುವರಿಸುವ ಮೂಲಕ ಸೈನ್ಯವು ಸತ್ಯಗಳನ್ನು ಮರೆಮಾಡಿತ್ತು ಎನ್ನಲಾಗಿದೆ. ಸೈನ್ಯದ ಸಂಪ್ರದಾಯದ ಪ್ರಕಾರ ಪರಮ-ವೀರ ಚಕ್ರ ಪಡೆದವರಿಗೆ ಶ್ರೇಣಿಯನ್ನು ಲೆಕ್ಕಿಸದೆ ವಂದಿಸಲಾಗುತ್ತದೆ. ಈ ವಿಚಾರದಲ್ಲಿ ಕುಮಾರ್ ಮತ್ತು ಹಿರಿಯ ಅಧಿಕಾರಿಗಳ ನಡುವೆ ನಡೆದ ಸಂಘರ್ಷವೇ ಈ ವಿವಾದಕ್ಕೆ ಮೂಲ ಕಾರಣ ಎಂದು ಊಹಿಸಲಾಗಿದೆ. == ಇತರ ಬೆಳವಣಿಗೆಗಳು == ಕುಮಾರ್ ಅವರಿಗೆ ಹಿಮಾಚಲ ಪ್ರದೇಶ ಸರ್ಕಾರವು ಉದ್ಯೋಗದ ಅವಕಾಶವನ್ನು ನೀಡಿದೆ,ನಿವೃತ್ತಿಯ ನಂತರದ ಪ್ರಯೋಜನಗಳನ್ನು ಪಡೆಯಲು ಸೈನ್ಯದಲ್ಲಿ ೧೫ ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ನಂತರ ಕೂಡ ಅವರು ಈ ಪ್ರಸ್ತಾಪವನ್ನು ಸ್ವೀಕರಿಸಬಹುದಾಗಿದೆ. ೨ ಜುಲೈ ೨೦೧೪ರಂದು, ಕುಮಾರ್ ಅವರು ನಾಯ್ ಸುಬೇದಾರ್‌ಗೆ ಬಡ್ತಿ ನೀಡಿ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಆಫೀಸರ್ (ಜೆಸಿಒ) ಆದರು. ೨೦೦೮ರಲ್ಲಿ ಹವಾಲ್ದಾರರ್ ಹುದ್ದೆಯಿಂದ ಲ್ಯಾನ್ಸ್ ನಾಯಕ್ ಹುದ್ದೆಗೆ ಅವರನ್ನು ಕೆಳಗಿಳಿಸಲಾಗಿದ್ದು ಈ ಸಮಯದಲ್ಲಿ ಸಮಸ್ಯೆಯಾಗಿತ್ತು, ಆದರೆ ನಂತರ ಈ ಸಮಸ್ಯೆಯನ್ನು ಉನ್ನತ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಪರಿಹರಿಸಲಾಯ್ತು. ಸೈನ್ಯದಲ್ಲಿ ಶೌರ್ಯ ಪ್ರಶಸ್ತಿಗಳನ್ನು ಪಡೆದವರಿಗೆ ಯಾವುದೇ ಭಡ್ತಿಗಳಿಲ್ಲ ಮತ್ತು ಘಟಕದಲ್ಲಿನ ತಮ್ಮ ಸಹ ಸೈನಿಕರೊಂದಿಗೆ ಅವರ ಹಿರಿತನದ ಪ್ರಕಾರ ಬಡ್ತಿ ನೀಡಲಾಗುತ್ತದೆ ಎಂದು ವಿವರಣೆ ನೀಡಲಾಯ್ತು. == ಚಲನಚಿತ್ರಗಳಲ್ಲಿ == ಎಲ್ಒಸಿ ಕಾರ್ಗಿಲ್ ಎಂಬ ಹಿಂದಿ ಚಿತ್ರದಲ್ಲಿ ಕುಮಾರ್ ಅವರ ಕಥೆಯನ್ನು ಅದೇ ಸಂಘರ್ಷದ ಭಾಗವಾಗಿದ್ದ ಇತರರೊಂದಿಗೆ ಚಿತ್ರಿಸಲಾಗಿದೆ, ಇದರಲ್ಲಿ ಸಂಜಯ್ ಕುಮಾರ್ ಅವರ ಪಾತ್ರವನ್ನು ಬಾಲಿವುಡ್ ನ ಪ್ರಸಿದ್ಧ ನಟ ಸುನಿಲ್ ಶೆಟ್ಟಿ ನಿರ್ವಹಿಸಿದ್ದಾರೆ . == ಉಲ್ಲೇಖಗಳು ==